Sunday, November 9, 2008

ಬದುಕಿಗೆ ಅರ್ಥ


ಅವನ ಕೆಲಸದ ಬಗ್ಗೆ ಯಾರು ಕೇಳಿದರೂ ಅರ್ಥಗರ್ಭಿತವಾಗಿ ನಕ್ಕು ಸುಮ್ಮನಾಗಿಬಿಡುತ್ತಿದ್ದ. ಹೀಗೊಂದು ಕೆಲಸವೂ ಇರಬಹುದೇ ಎಂದು ಆಶ್ಚರ್ಯವೂ ಆಗಬಹುದು. ಆದರೆ ನಂಬಿ, ಅವನು ಪ್ರತಿದಿನ ಮುಂಜಾನೆ ಎದ್ದು ತಲೆ ತಗ್ಗಿಸಿ ನಡೆಯುತ್ತಾ ಇರುತ್ತಿದ್ದ. ದಿನಕ್ಕೆ ಇಪ್ಪತ್ತು ಮುವ್ವತ್ತು ಕಿಲೋಮೀಟರ್ ನಡೆದರೆ ಅವನಿಗೆ ಅಂದಿನ ಊಟಕ್ಕೆ ಆಗುವಷ್ಟು ಸಿಗುತ್ತಿತ್ತು, ಜೊತೆಗೆ ಸ್ವಲ್ಪ ಉಳಿತಾಯವೂ ಆಗುತ್ತಿತ್ತು. ಅವನು ಆಚೆ ಕಾಲಿಟ್ಟು ಬರಿಗೈನಲ್ಲಿ ಹಿಂದಿರುಗಿದ ಪ್ರಸಂಗವೇ ಇರಲಿಲ್ಲ. 

ತಲೆ ತಗ್ಗಿಸಿ ದೃಷ್ಟಿಯನ್ನು ತೀಕ್ಷ್ಣವಾಗಿ ನೆಲದ ಮೇಲೆ ಕೇಂದ್ರೀಕರಿಸಿ ನಡೆದರೆ ಅವನ ದೃಷ್ಟಿಗೆ ಚಿಲ್ಲರೆ ಕಾಸು ಕಾಣಿಸುತ್ತಿತ್ತು. ಎಷ್ಟೋ ಬಾರಿ ಒಮ್ಮೊಮ್ಮೆ ನೋಟುಗಳೂ ಸಿಗುವುದಿತ್ತು. ಆದರೆ ಸರಿಯಾದ ಸಂಪಾದನೆಗೆ ಸ್ವಲ್ಪ ದುಡ್ಡನ್ನು ಮೂಲಧನವಾಗಿ ಹೂಡಬೇಕಿತ್ತು. ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ದುಡ್ಡು, ಮತ್ತು ಇತರೆ ವಸ್ತುಗಳು ಸಿಗುವ ಸಾಧ್ಯತೆ ಹೆಚ್ಚಿತ್ತು. ಉದಾಹರಣೆಗೆ ಬಸ್ಸನ್ನು ಹತ್ತಿದರೆ ಹುಡುಕಾಟದ ನಿಯಮಾನುಸಾರ ಕಡೆಯ ಸ್ಟಾಪಿನಲ್ಲಿ ಎಲ್ಲರೂ ಇಳಿದ ನಂತರ ಇಡೀ ಬಸ್ಸಿನಲ್ಲಿ ಕಣ್ಣು ಹಾಯಿಸಿ ಕಂಡಕ್ಟರ್ ಮತ್ತು ಚಾಲಕನಿಗೆ ಅನುಮಾನ ಬರದಂತೆ ಕಂಡ ಅನಾಥವಸ್ತುವನ್ನು ಎತ್ತಿ ತನ್ನದೇ ಎಂಬಂತೆ ಸಹಜವಾಗಿ ಹಿಡಿದು ತರಬೇಕಿತ್ತು. ಇಲ್ಲವೇ ರೈಲು ನಿಲ್ದಾಣಕ್ಕೆ ಹೋಗಿ ಎಲ್ಲರೂ ಇಳಿದ ನಂತರ ಬೋಗಿಗಳಲ್ಲಿ ಒಂದು ಸುತ್ತು ಹಾಕಿ ಬರಬೇಕಿತ್ತು. ಅದಕ್ಕೆ ಅನುಮಾನ ಬರದಂತೆ ಪ್ಲಾಟ್ ಫಾರಂ ಟಿಕೇಟನ್ನು ಕೊಳ್ಳಬೇಕಿತ್ತು. ಅಥವಾ ಸಿನೇಮಾ ಹಾಲಿನಲ್ಲಿ ಸಿನೇಮಾ ನೋಡಿ ವಾಪಸ್ಸಾಗುವ ಗಳಿಗೆಯಲ್ಲಿ ದೀಪಗಳನ್ನಾರಿಸುವ ಮುನ್ನ ಚಾಕಚಕ್ಯತೆಯಿಂದ ತನ್ನ ಕೆಲಸವನ್ನು ಮಾಡಬೇಕಿತ್ತು.

ಹೀಗೆ ಸಿಕ್ಕ ಹಣ, ವಸ್ತುಗಳು ಎರಡು ಥರದ್ದಾಗಿರುತ್ತಿದ್ದವು. ಮೊದಲನೆಯದೆಂದರೆ ಆ ವಸ್ತುವಿನ ಮಾಲೀಕರು ಯಾರು ಎನ್ನುವುದರ ಬಗ್ಗೆ ಸುಳಿವು ಇರುವಂತಹ ವಸ್ತುಗಳು. ಬ್ಯಾಗುಗಳಲ್ಲಿನ ವಿಳಾಸ, ಐ.ಡಿ.ಕಾರ್ಡು, ಕ್ರೆಡಿಟ್ ಕಾರ್ಡು, ಮೊಬೈಲ್ ಫೋನು ಇವುಗಳೆಲ್ಲ ಈ ಜಾತಿಗೆ ಸೇರಿದವು. ಎರಡನೆಯದೆಂದರೆ ಬರೇ ದುಡ್ಡು, ಅನಾಥವಾಗಿ ಬಿದ್ದಿರುವ ಬುಟ್ಟಿ, ಬಿಟ್ಟು ಹೋದ ಛತ್ರಿ, ಹೀಗೆ ಅದನ್ನು ಕಳೆದುಕೊಂಡವರು ಯಾರೆಂದು ತಿಳಿಯದೇ ಇರುವಂಥವು. ಇದ್ದಂತಹದ್ದನ್ನು ಯಾವುದೇ ಪಾಪಪ್ರಜ್ಞೆಯೂ ಇಲ್ಲದೇ ಅವನು ತೆಗೆದೊಯ್ಯಬಹುದಿತ್ತು. ಈ ಧಂಧೆಗಿಳಿದಾಗ ಅವನು ಆಗಾಗ ಯೋಚಿಸಿದ್ದುಂಟು: ಇದಕ್ಕೂ ಕಳ್ಳತನಕ್ಕೂ ವ್ಯತ್ಯಾಸವೇನು? ಅಂತ. ತನ್ನ ಕಾಯಕ ಇತರರಿಂದ ಕಸಿಯುವುದಾಗಿರಲಿಲ್ಲ. ಆದರೆ ಅವರೇ ಕಳಕೊಂಡ ವಸ್ತುಗಳನ್ನು ಹೆಕ್ಕಿ ತೆಗೆಯುವುದರಲ್ಲಿ ತಾನು ನಿಪುಣನಾದ್ದರಿಂದ ಇದು ತನ್ನ ಆದಾಯ ಎಂದು ಅವನು ಪರಿಗಣಿಸಬಹುದಿತ್ತು. ಜೊತೆಗೆ ಅದು ಯಾರಿಗೆ ಸಂದಿದ್ದೆಂದು ತಿಳಿಯದ್ದರಿಂದ, ತಿಳಿಯುವ ಸಾಧ್ಯತೆ ಇರಲಿಲ್ಲವಾದ್ದರಿಂದ, ತಾನು ತೆಗೆದುಕೊಂಡು ಹೋಗುವುದರಲ್ಲಿ ಅವನಿಗೆ ತಪ್ಪೇನೂ ಕಾಣಿಸಲಿಲ್ಲ. ಆದ್ದರಿಂದಲೇ ಮೊದಮೊದಲಿಗೆ ಅವನು ಬರೇ ನೆಲದ ಮೇಲೆ ಬಿದ್ದಿದ್ದ ದುಡ್ಡನ್ನು ಮಾತ್ರ ಹೆಕ್ಕುತ್ತಿದ್ದ. ಮಿಕ್ಕ ವಸ್ತುಗಳನ್ನು ಹಾಗೆಯೇ ಬಿಟ್ಟುಬಿಡುತ್ತಿದ್ದ. ಆದರೆ ನಂತರ ನಡೆದ ಘಟನೆಯಿಂದ ಅವನು ಸ್ವಲ್ಪ ಬದಲಾಗಿದ್ದ.

ಒಂದು ದಿನ ಅವನಿಗೆ ಒಂದು ಕವರ್ ಕಂಡಿತು. ಕುತೂಹಲ ತಡೆಯಲಾರದೇ ಅದನ್ನು ಎತ್ತಿಕೊಂಡ. ಅದರಲ್ಲಿ ಯುವಕನೊಬ್ಬನ ಸರ್ಟಿಫಿಕೇಟುಗಳು, ಸಂದರ್ಶನಕ್ಕೆ ಆಹ್ವಾನಿಸುತ್ತ ಒಂದು ಪತ್ರ ಮತ್ತು ಇತರೆ ಕಾಗದಗಳಿದ್ದವು. ಒಂದು ಕ್ಷಣಕ್ಕೆ ಅವನಿಗೆ ಏನು ಮಾಡಬೇಕೋ ತೋರಲಿಲ್ಲ. ಇದನ್ನು ಆ ಯುವಕನಿಗೆ ತಲುಪಿಸಿದರೆ ಅವನಿಗೆ ನೌಕರಿ ಸಿಗಬಹುದು. ಇಲ್ಲವಾದರೆ ಆ ಯುವಕನಿಗೆ ಅನೇಕ ದಿನಗಳಕಾಲ ತೊಂದರೆಯಂತೂ ಉಂಟಾಗುತ್ತದೆ. ಇದನ್ನು ಆ ಯುವಕನಿಗೆ ತಲುಪಿಸಲು ಹೆಚ್ಚಿನ ಶ್ರಮವೇನೂ ಪಡಬೇಕಿರಲಿಲ್ಲ. ಸಂದರ್ಶನವಾಗಬೇಕಿದ್ದ ಕಂಪನಿಯ ದಫ್ತರು ಸಮೀಪದಲ್ಲೇ ಇತ್ತು. ಅವನು ಬೇಗ ಅಲ್ಲಿಗೆ ಹೋದರೆ ಆ ಯುವಕನಿಗೆ ಈ ಪ್ಯಾಕೆಟ್ಟನ್ನು ಸಮಯಕ್ಕೆ ತಲುಪಿಸಬಹುದಿತ್ತು. ಹೀಗಂದುಕೊಂಡ ಕೂಡಲೇ ಅವನು ಆ ಪ್ಯಾಕೆಟ್ಟನ್ನು ಒಯ್ದು ಆ ಯುವಕನನ್ನು ಹುಡುಕಿ ಅವನಿಗೆ ಕೊಟ್ಟ. ಅಂದಿನಿಂದಾದಿಯಾಗಿ ಬರೇ ಹಣ ಹೆಕ್ಕಿ ತೆಗೆಯುತ್ತೇನೆ ಅನ್ನುವ ತನ್ನ ನಿಯಮವನ್ನು ಮೀರಿ ಎಲ್ಲವನ್ನೂ ತೆಗೆಯುವುದು, ಆ ವಸ್ತುವನ್ನು ತಲುಪಿಸುವ ಮಾರ್ಗ ತಿಳಿದರೆ ಅದರ ಮಾಲೀಕರಿಗೆ ತಲುಪಿಸುವುದು. ಇಲ್ಲವಾದರೆ ತಾನೇ ಇಟ್ಟುಕೊಳ್ಳುವುದು. ಹೀಗೆ ಜನರಿಗೆ ವಸ್ತುಗಳನ್ನು ತಲುಪಿಸುವುದರಿಂದ ಅವನಲ್ಲಿರಬಹುದಾಗಿದ್ದ ಪಾಪ ಪ್ರಜ್ಞೆಯೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ಅವನ ಕಾಯಕದ ಬಗ್ಗೆ ಒಮ್ಮೊಮ್ಮೆ ಹೆಮ್ಮೆಯೂ ಉಂಟಾಗುತ್ತಿತ್ತು.

ಜೀವನ ಹೀಗೆ ಸುಖವಾಗಿಯೇ ನಡೆದಿತ್ತು. ತಾನು ಈ ರೀತಿಯಾಗಿ ಸಂಪಾದಿಸುವುದಲ್ಲದೇ, ತಮ್ಮ ಬಗೆಗಿನ ಸುಳಿವುಗಳನ್ನು ಬಿಟ್ಟುಕೊಟ್ಟವರಿಗೆ ಅವರವರ ವಸ್ತುಗಳನ್ನು ಹಿಂದಿರುಗಿಸುವ ಸೇವೆಯನ್ನೂ ಮಾಡುತ್ತಿದ್ದೇನೆಂಬ ಸಂಭ್ರಮ ಅವನಿಗಿತ್ತು. ಹಣದ ಹುಡುಕಾಟದಿಂದ ಆರಂಭವಾದರೂ ಈ ಕಾಯಕ ಅವನಿಗೆ ಹಣಕ್ಕಿಂತ ಹೆಚ್ಚಾದ ಕಾಣ್ಕೆಯನ್ನು ನೀಡಿತ್ತು. ಆದರೆ ಒಂದು ಬಾರಿ ಮಾತ್ರ ಅವನು ತನಗೆ ಕಂಡ ವಸ್ತುವನ್ನು ಎತ್ತಲಾರದೇ - ಏನು ಮಾಡಬೇಕೋ ತೋರದೇ - ಅವಾಕ್ಕಾಗಿ ಬಿಟ್ಟಿದ್ದ. ಒಂದು ಸಿನೇಮಾ ಥಿಯೆಟರಿನಲ್ಲಿ ಸಿನೆಮಾದ ನಂತರ ತನ್ನ ತೀಕ್ಷ್ಣ ದೃಷ್ಟಿಯನ್ನು ಹರಿಯ ಬಿಟ್ಟಾಗ ಸೀಟಿನಮೇಲೆ ಕೆಲದಿನಗಳ ಹಿಂದಷ್ಟೇ ಹುಟ್ಟಿರಬಹುದಾದ ಹಸುಗೂಸೊಂದು ಕಂಡಿತು. ತನ್ನ ನಿಯಮಾನುಸಾರ ಅದರ ಮಾಲೀಕರ ವಿಳಾಸ ತಿಳಿಯದಿದ್ದಲ್ಲಿ ತಾನೇ ಅದನ್ನು ಕೊಂಡೊಯ್ದು ಇಟ್ಟುಕೊಳ್ಳಬೇಕಿತ್ತು. ಆದರೆ ಆದಿನ ಮಾತ್ರ ಅವನು ತನ್ನ ನಿಯಮವನ್ನು ಪಾಲಿಸದೇ ಅಲ್ಲಿಂದ ಕಂಬಿ ಕಿತ್ತಿದ್ದ!

ಮತ್ತೊಂದು ದಿನ ಅವನಿಗೆ ನಿಂತ ಬಸ್ಸಿನಲ್ಲಿ ಒಂದು ಟಿಫಿನ್ ಡಬ್ಬ, ಅದರ ಜೊತೆಗೆ ಒಂದು ವಾರ್ತಾಪತ್ರಿಕೆ ದೊರೆತಿತ್ತು. ವಾರ್ತಾಪತ್ರಿಕೆ ಹಿಂದಿ ಭಾಷೆಯಲ್ಲಿತ್ತು. ಜೊತೆಗೆ ಅದರ ತಾರೀಖು ಎರಡು ವರ್ಷಗಳಿಗೂ ಹಿಂದಿನದ್ದಾಗಿತ್ತು. ಅದರಲ್ಲಿ ಪ್ರಮುಖವಾಗಿ ಕಾಣಿಸುತ್ತಿದ್ದ ಸುದ್ದಿ ಎಂದರೆ ಟಿಫಿನ್ ಡಬ್ಬದಲ್ಲಿ ಟೈಮರ್ ಜೋಡಿಸಿದ ಸ್ಫೋಟಕ ಪದಾರ್ಥಗಳನ್ನಿಟ್ಟು ಬಸ್ಸಿನಲ್ಲಿ ಬಿಟ್ಟುಹೋದ ಆತಂಕವಾದಿಗಳ ಬಗ್ಗೆ ಒಂದು ವರದಿಯಾಗಿತ್ತು. ಈ ರೀತಿಯ ಘಟನೆಗಳು ಹಿಂದೆ ದೆಹಲಿಯಲ್ಲಿ ನಡೆದಿದ್ದವೆಂದು ಅವನು ಕೇಳಿದ್ದ. ಆದರೆ ಈ ಪ್ರಾಂತದಲ್ಲಿ ಇಂಥ ಯಾವ ಘಟನೆಯೂ ನಡಿದ ನೆನಪು ಅವನಿಗಿಲ್ಲ.

ಆ ಪತ್ರಿಕೆಯ ಮೇಲೆ ಕಣ್ಣು ಹಾಯಿಸಿದ. ಡಬ್ಬವನ್ನು ತೆಗೆಯಬೇಕೋ ಇಲ್ಲವೋ ಆಲೋಚಿಸಿದ. ತನ್ನ ಮೇಲೆ ತಾನೇ ಹೇರಿಕೊಂಡ ಕಾಯಕದ ಧರ್ಮದ ಪ್ರಕಾರ ಅವನು ಆ ಡಬ್ಬವನ್ನುತೆರೆದು ನೋಡಬೇಕಿತ್ತು. ಅದರಲ್ಲಿ ಮಾಲೀಕರ ಸುಳಿವಿಲ್ಲದಿದ್ದರೆ ತಾನೇ ಅದನ್ನು ಇಟ್ಟುಕೊಳ್ಳಬೇಕಿತ್ತು. ಇಲ್ಲವಾದರೆ ಮಾಲೀಕರಿಗೆ ತಲುಪಿಸಬೇಕಿತ್ತು. ಅದೂ ಇಲ್ಲವೆಂದರೆ ಕೂಸನ್ನು ಬಿಟ್ಟುಹೋದ ಹಾಗೆ ಅದನ್ನು ಅಲ್ಲೇ ಬಿಟ್ಟು ಹೋಗಬೇಕಿತ್ತು. ಆದರೆ ಬಿಟ್ಟುಹೋದರೆ ಪೀಕ್ ಅವರ್ ನಲ್ಲಿ ಕಚಾಕಚ್ ತುಂಬಬಹುದಾದ ಬಸ್ಸಿನ ಪ್ರಯಾಣಿಕರ ಪಾಲಾಗುತ್ತದೆ ಆ ಟಿಫಿನ್ ಡಬ್ಬ. ಏನು ಮಾಡುವುದು? 

ಯೋಚಿಸಿದ. 

ಮಾರನೆಯ ದಿನ ಎಂದಿನಂತೆ, ದೆಹಲಿಯಂತೆ, ಎಲ್ಲೆಡೆಯಂತೆ ಈ ಊರಿನಲ್ಲಿಯೂ ವಾರ್ತಾಪತ್ರಿಕೆ ಪ್ರಕಟಗೊಂಡಿತು.

೮ ಸೆಪ್ಟೆಂಬರ್ ೨೦೦೬.

Sunday, June 22, 2008

ಮಾಸ್ತಿ ವೆಂಕಟೇಶ ಅಯ್ಯಂಗಾರ್





ಒಂದು ದಿನ ಸಾಯಂಕಾಲ ಬಸವನಗುಡಿ ಪ್ರಾಂತದಲ್ಲಿರುವ ನನ್ನ ಹಿರಿಯ ಮಿತ್ರರ ಅಂಗಡಿಯಲ್ಲಿ ನಾವು ಒಂದಷ್ಟು ಜನ ಅದೂ, ಇದೂ ಮಾತನಾಡುತ್ತಾ ಕುಳಿತಿದ್ದೆವು. ಮಾತು ಮುಂದುವರೆದಂತೆ, ವಿಷಯ ದೆವ್ವ ಪಿಶಾಚಗಳತ್ತ ಹರಿಯಿತು. ಅಲ್ಲಿದ್ದ ನಮಗೆಲ್ಲ ಕಥೆ ಕಾದಂಬರಿ ಹೀಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದುದರಿಂದ, ಸಹಜವಾಗಿಯೇ ದೆವ್ವ ಪಿಶಾಚಗಳ ಕಥೆಗಳತ್ತಲೂ ಮಾತು ಹೊರಳಿತು. ನಾನು ಸಾಕಿ, ಎಚ್.ಜಿ.ವೆಲ್ಸ್, ಇತ್ಯಾದಿ ಲೇಖಕರ ಹೆಸರನ್ನು ಹೇಳಿದೆ. ಕಡೆಗೆ ಕನ್ನಡ ಸಾಹಿತ್ಯದತ್ತ ಮಾತು ಹೊರಳಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ ಕಥೆಗಳಾದ ’ಮಲೆನಾಡಿನ ಒಂದು ಪಿಶಾಚ’ ’ವೆಂಕಟರಾಯನ ಪಿಶಾಚ’ ಈ ಎಲ್ಲವನ್ನೂ ಚರ್ಚಿಸಿದವೆ.

ನಮ್ಮ ಹಿರಿಯ ಮಿತ್ರರು ಚೆನ್ನಾಗಿ ಓದಿಕೊಂಡವರು. ವಿಚಾರವಾದಿಗಳು. ದೇವರು, ದೆವ್ವ, ಪಿಶಾಚಗಳೆಂದರೆ ಅಷ್ಟೇನೂ ನಂಬುವವರಲ್ಲ. ಹೀಗಿದ್ದರೂ ಈ ಮಿತ್ರರು - ತಾವು ಮುಂದೆ ಹೇಳಲಿರುವ ಸಾಲನ್ನು ಉದಾಹರಣೆಯಾಗಿ ಕೊಟ್ಟರು. "ನಮ್ಮಲ್ಲೆ ಅನೇಕರಿಗೆ ಪಿಶಾಚ ಇದೆ ಎಂಬ ನಂಬಿಕೆ ಇಲ್ಲದಿದ್ದರೂ ಪಿಶಾಚ ಇಲ್ಲ ಎನ್ನುವುದರ ನಂಬಿಕೆ ಇಲ್ಲ". ಈ ಪೀಠಿಕೆಯನ್ನು ಹಾಕಿ ಮಾತುಕತೆ ಮುಂದುವರೆಸಿದ ಈ ಹಿರಿಯ ಮಿತ್ರರು, ತಮಗೆ ಈಚೆಗೆ ಆದ ಅನುಭವವನ್ನು ವಿವರಿಸಿದರು. ಮಾಸ್ತಿಯವರ ಕಥೆಗಳಲ್ಲಿ ಬರುವ ಪಿಶಾಚದ ಘಟನೆಗಳು, ಅದರೊಂದಿಗೇ ಬರುವ ಅವರ ಗೆಳೆಯರಾದ ’ಶ್ರೀರಾಮ್’ ಎಂಬವರ ಹೆಸರೂ, ಹಾಗೂ ನನಗೂ ಅದೇ ಹೆಸರಿರುವ ಸತ್ಯ.. ಹೀಗೆಲ್ಲಾ ಕಾಕತಾಳೀಯವು ತುಂಬಾ ಇರುವುದರಿಂದ ಈ ಕಥೆಯನ್ನು ಹೇಳಲೇಬೇಕು ಎನ್ನಿಸುತ್ತಿದೆ. ಹಾಗೆ ನೋಡಿದರೆ ನನಗಿಂತ ಒಳ್ಳೆಯ ಕಥೆಗಾರರಾದ ಹಿರಿಯ ಮಿತ್ರರೇ ಇದನ್ನು ಬರೆಯಬಹುದಿತ್ತು. ಅವರು ಇದನ್ನು ಬರೆಯಲು ಆಸಕ್ತಿ ತೋರಿಸಲಿಲ್ಲವಾದ್ದರಿಂದ - ನಾನೇ ಇದನ್ನು ಬರೆಯಲು, ಮಿತ್ರರ ಅನುಭವವನ್ನು ನಿಮ್ಮೊಂದಿಗೂ ಹಂಚಿಕೊಳ್ಳಲು ಮುಂದಾಗುತ್ತಿದ್ದೇನೆ.



ಕೆಲವು ವರ್ಷಗಳಿಂದ ಈ ಹಿರಿಯ ಮಿತ್ರರು ಬಸವನಗುಡಿ ಪ್ರಾಂತದಲ್ಲಿ ತಮ್ಮ ಪುಸ್ತಕದಂಗಡಿಯ ಕಾರುಬಾರು ನಡೆಯಿಸಿಕೊಂಡು ಬರುತ್ತಾ ಇದ್ದಾರೆ. ಸಾಹಿತ್ಯ ಪ್ರಿಯರೂ, ಸಾಹಿತಿಗಳೂ ಆಗಿರುವುದರಿಂದ ಈ ಮಿತ್ರರು ಹೆಚ್ಚಿನ ಸಮಯವನ್ನು ಪುಸ್ತಕಗಳ ನಡುವೆಯೇ ಕಳೆಯಲು ಬಯಸುತ್ತಾರೆ. ಪ್ರತಿದಿನ ಬೆಳಿಗ್ಗೆ ಲಾಲ್‌ಬಾಗಿಗೆ ವಾಕಿಂಗ್ ಹೋಗಿ ಬರುವುದು. ಮನೆಗೆ ಬಂದು ತಿಂಡಿ ತಿನ್ನುವುದು. ನಂತರ ಮನೆಯಿಂದ ಅಂಗಡಿಗೆ ಹೊರಟರೆಂದರೆ ಅಲ್ಲಿಯೇ ಕುಳಿತು ಓದುವುದು, ಬರೆಯುವುದು, ಬೇಸರವಾದಾಗ ಮಲಗುವುದು ಮಾಡುತ್ತಾರೆ. ಅದಕ್ಕೆಂದೇ ಅವರು ಅಂಗಡಿಯ ಹಿಂಭಾಗದಲ್ಲಿ ಒಂದು ಪುಟ್ಟ ಆಂಟೆರೂಮನ್ನು ಮಾಡಿಕೊಂಡಿದ್ದಾರೆ. ಅದೇ ಕೋಣೆಯಲ್ಲಿ ಒಂದು ವಿಡಿಯೋ, ಹಾಗೂ ಪುಟ್ಟ ಟಿ.ವಿ. ಇದೆ. ವಾರ್ತೆಗಳಿಗೆ, ಮತ್ತು ಒಂದಷ್ಟು ಒಳ್ಳೆಯ ಸಿನೆಮಾ ಕ್ಯಾಸೆಟ್ಟುಗಳನ್ನು ನೋಡುವುದಕ್ಕೆ ಅದನ್ನು ಬಳಸುತ್ತಾರೆ. ಹೀಗೆ ಅಂಗಡಿಯನ್ನೇ ಜೀವನದ ಒಂದು ಅಂಗವನ್ನಾಗಿ ಈ ಮಿತ್ರರು ಮಾಡಿಕೊಂಡಿದ್ದಾರೆ. ಪ್ರತಿದಿನ ಬೆಳಿಗ್ಗೆ ೯ ಘಂಟೆಗೆ ಅವರು ಅಂಗಡಿ ತಲುಪಿದರೆ, ರಾತ್ರೆ ದೂರದರ್ಶನದ ಇಂಗ್ಲೀಷು ವಾರ್ತೆಗಳ ನಂತರವೇ ಅವರು ಮನೆಗೆ ಹೋಗುವುದು. ಅಂಗಡಿಯ ವ್ಯಾಪಾರ ಸುಗಮವಾಗಿ ನಡೆಯಲು ನಮ್ಮ ಮಿತ್ರರು ಇಬ್ಬರು ಹುಡುಗರನ್ನು ನಿಯಮಿಸಿಕೊಂಡಿದ್ದಾರೆ. ಅವರಿಬ್ಬರೂ ಅಂಗಡಿ ನೋಡಿಕೊಳ್ಳುವುದರಿಂದ, ನಮ್ಮ ಮಿತ್ರರು ಹೊರ ಅಂಗಡಿಯಲ್ಲಿರುವುದಕ್ಕಿಂತ ಒಳಕೋಣೆಯಲ್ಲಿರುವುದೇ ಹೆಚ್ಚು.

ಅಂಗಡಿಯ ಹೊರಕೋಣೆಯಲ್ಲಿಲ್ಲದಾಗ ನಮ್ಮ ಮಿತ್ರರನ್ನು ನೋಡುವುದು ಸರಳ ವಿಷಯವೇನೂ ಅಲ್ಲ. ಬಂದವರು ಮೊದಲಿಗೆ ಅವರ ಅಂಗಡಿಯ ಹುಡುಗನಿಗೆ ತಮ್ಮ ಪರಿಚಯ ಮತ್ತು ಬಂದ ಉದ್ದೇಶ ತಿಳಿಸಬೇಕು. ಅದನ್ನು ಹುಡುಗನು ಹೋಗಿ ನಮ್ಮ ಮಿತ್ರರಿಗೆ ಹೇಳುವನು. ಆಗ ಮಿತ್ರರು ಮುಖ್ಯಕೆಲಸ ಯಾವುದೂ ಇಲ್ಲದಿದ್ದಲ್ಲಿ, ಬರವಣಿಗೆಯಲ್ಲಿ ನಿರತರಾಗಿಲ್ಲದಿದ್ದಲ್ಲಿ ಬಂದವರಿಗೆ ಸಂದರ್ಶನ ನೀಡುವರು. ಹೀಗೆ ಅವರು ಒಳಗೆ ಅಡಗಿ ಕುಳಿತುಕೊಳ್ಳುವುದಕ್ಕೂ ಕಾರಣವಿತ್ತು. ಕನ್ನಡದಲ್ಲಿ ಈಚೀಚೆಗೆ ಬರಹಗಾರರು ಬಹಳವಾಗಿ, ಓದುಗರು ಕಡಿಮೆಯಾಗಿರುವುದನ್ನು ಪುಸ್ತಕ ವ್ಯಾಪಾರಿಗಳಾದ ಮಿತ್ರರು ಮನಗಂಡಿದ್ದರು. ಹೀಗಾಗಿ, ತಾವು ಬರೆದ ಪುಸ್ತಕಗಳನ್ನು ತಾವೇ ಅಚ್ಚು ಹಾಕಿಸಿ, ಮಾರಾಟ ಮಾಡಲು, ಲೇಖಕರು ಇವರ ಅಂಗಡಿಗೆ ಬರುವುದು ಸಾಮಾನ್ಯ ವಿಷಯವಾಗಿತ್ತು. ನಮ್ಮ ಮಿತ್ರರೂ ಲೇಖಕರೇ ಆದುದರಿಂದ ಅವರ ಪಾಡನ್ನು ನೋಡಿ ಕರಗಿಬಿಡುತ್ತಿದ್ದರು. ಹೀಗಾಗಿ ಲೇಖಕರಿಗೆ ’ಬೇಡ’ ಎಂಬ ಉತ್ತರ ಹೇಳುವುದು ಸಾಧ್ಯವಾಗದೇ ಮಾರಾಟವಾಗದ ಪುಸ್ತಕಗಳ ದಾಸ್ತಾನು ಹೆಚ್ಚಾಗಿ ಹೋಗುತ್ತಿತ್ತು. ಇಂಥ ಸಂದರ್ಭಗಳು ಒದಗಿದಾಗ ನಮ್ಮ ಮಿತ್ರರು ಒಳಗೇ ಇದ್ದು ಬಿಡುವುದೂ ಹಾಗೂ ಅಂಗಡಿಯ ಹುಡುಗರೇ "ಸಾಹೇಬರು ಒಳಗಿಲ್ಲ" ಎಂದೋ, "ಯಜಮಾನರು ಏನೋ ಬರೆಯುತ್ತಿದ್ದಾರೆ" ಎಂದೋ ಹೇಳಿ ಕಳುಹಿಸಿಬಿಡುತ್ತಿದ್ದರು. ಅವರ ಈ ಅಭ್ಯಾಸ ನಮಗೆಲ್ಲರಿಗೂ ತಿಳಿದದ್ದೇ. "ವ್ಯವಹಾರವೇ ಬೇರೆ, ಸಾಹಿತ್ಯದ ಬಗೆಗಿನ ಪ್ರೀತಿಯೇ ಬೇರೆ - ಅಲ್ಲವೇ?" ಎಂದು ಅವರೊಮ್ಮೆ ನಮ್ಮನ್ನು ಕೇಳಿದ್ದಾಗ ನಾವುಗಳೆಲ್ಲಾ ಅಹುದೆಂದು ಒಪ್ಪಿದೆವು. ದಿಟವಾದ ಮಾತನ್ನು ಯಾರೇ ಹೇಳಿದರೂ ಒಪ್ಪಬೇಕಾದುದ್ದೇ - ಅಲ್ಲವೇ?



ಹಿಂದೆ ಕೊಟ್ಟ ವಿವರಗಳಿಗೂ, ನಮ್ಮ ಮಿತ್ರರು ಹೇಳಿದ ಕಥೆಗೂ ಸಂಬಂಧ ಇದೆ ಎನ್ನಿಸಿದ್ದರಿಂದಲೇ ನಾನು ನಿಮಗೆ ಈ ಹಿನ್ನೆಲೆಯನ್ನು ಹೇಳಿದೆ. ಈಗ ನಮ್ಮ ಮಿತ್ರರು ಅಂದು ಸಂಜೆ ವಿವರಿಸಿದ ಘಟನೆಯನ್ನು ನಾನು ನಿಮಗೆ ಹೇಳುವೆನು.

ಯಾವಾಗಲಾದರೂ ಬೇಸರವಾದಾಗ - ಅದೂ ಸಂಜೆಯ ವೇಳೆಯಲ್ಲಿ ನಮ್ಮ ಮಿತ್ರರು ಒಳಕೋಣೆಯಲ್ಲಿ ಕುಳಿತು ಸುರೆ ಕುಡಿಯುತ್ತಿದ್ದುದುಂಟು. ಈಗಿನ ಕಾಲದಲ್ಲಿ ಇದನ್ನು ಮಹಾಪರಾಧ ಎಂದು ಪರಿಗಣಿಸಲಾಗದಿದ್ದರೂ, ಮಧ್ಯ ವಯಸ್ಸಿನಲ್ಲಿರುವ ನನ್ನ ಹಿರಿಯ ಮಿತ್ರರಂಥವರಿಗೆ ಈ ಬಗ್ಗೆ ಸ್ವಲ್ಪ ಅಳುಕು ಇರುವುದು ಸಹಜವೇ ಆಗಿರುತ್ತದೆ. ಹಾಗೆ ನೋಡಿದರೆ ನನ್ನ ಈ ಮಿತ್ರರು ಹೆಚ್ಚು ಕುಡಿಯುವವರೇನೂ ಅಲ್ಲ.

ಹೀಗೆಯೇ ಒಂದು ಸಂಜೆ ತುಂಬಾ ಬೇಜಾರಾಗಿ, ಏನೂ ತೋರದೆ ನನ್ನ ಮಿತ್ರರು ಕುಳಿತಿದ್ದರಂತೆ. ಅಂದು ನಾವುಗಳ್ಯಾರೂ ಅವರನ್ನು ಭೇಟಿ ಮಾಡಲು ಹೋಗಿರಲಿಲ್ಲ. ಸುಮಾರು ಏಳು ಘಂಟೆಯ ವೇಳೆಗೆ ಏನೂ ತೋಚದವರಾಗಿ, ಮಿತ್ರರು ಸುರಾಪಾನ ಪ್ರಾರಂಭಿಸಿದರು. ಅಂದೇನು ಅಮಾವಾಸ್ಯೆಯೋ, ಹುಣ್ಣಿಮೆಯೋ ಹೇಳಲು ಬರುತ್ತಿದ್ದಿಲ್ಲ. ಏಕೆಂದರೆ ಹೊರಗೆಲ್ಲ ಮೋಡ ಮುಸಿಕಿದ್ದು ಇಡೀ ದಿನವೇ ಛಳಿಯಿಂದ ಕೂಡಿ, ಕತ್ತಲುಮಯ ಆಗಿತ್ತೆಂದು ಮಿತ್ರರು ಹೇಳಿದರು. ಅವರು ಸುರಾಪಾನ ಪ್ರಾರಂಭಿಸುವ ಮೊದಲು ಹೊರಬಂದು ಹುಡುಗರಿಗೆ - "ಹೊಸಬರು ಯಾರು ಬಂದರೂ ಒಳಗೆ ಬಿಡಬೇಡಿ" ಎಂದಷ್ಟೇ ಹೇಳಿ ಒಳಕೋಣೆಯ ಬಾಗಿಲು ಹಾಕಿ ಕುಳಿತರಂತೆ.

ಎಂಟು ಘಂಟೆಯ ವೇಳೆಗೆ ಇಬ್ಬರಲ್ಲಿ ಸಣ್ಣ ಹುಡುಗ ಇವರಿಗೆ ಹೇಳಿ ಮನೆಗೆ ಹೊರಟುಬಿಟ್ಟ. ಒಂಭತ್ತು ಘಂಟೆಯ ವೇಳೆಗೆ ದೊಡ್ಡವನು ಒಳಬಂದನಂತೆ. ಸಮಾನ್ಯವಾಗಿ ಆ ವೇಳೆಗೆ ಅವನು ಅಂಗಡಿಯ ಬಾಗಿಲು ಎಳೆದು ಮನೆಗೆ ಹೋಗುವುದು ರೂಢಿ. ಅವನು ಕೋಣೆಯೊಳಕ್ಕೆ ಬಂದ ಕೂಡಲೇ ನಮ್ಮ ಮಿತ್ರರು "ಸರಿ ನಾಳೆ ಸಮಯಕ್ಕೆ ಸರಿಯಾಗಿ ಬಾ. ಬಂದ ಮೇಲೆ ರಾಜಾಜಿನಗರಕೆ ಹೋಗಿ ಮಾವಿನಕೆರೆಯವರಿಂದ ಒಂದಿಷ್ಟು ಪುಸ್ತಕಗಳನ್ನು ತರಬೇಕು" ಎಂದು ಹೇಳಿದರಂತೆ.

ಅವರು ಹೇಳಿದ್ದಕ್ಕೆ ತೆಲೆ ಅಲ್ಲಾಡಿಸಿದ ಹುಡುಗ - ಅಲ್ಲಿಂದ ಹೊರಡದೆಯೇ - "ಸರ್ ನಿಮ್ಮನ್ನು ಕಾಣಲು ಹಿರಿಯರೊಬ್ಬರು ಬಂದಿದ್ದಾರೆ" ಎಂದು ಹೇಳಿದನಂತೆ. ಅಂದು ಆ ಸಮಯಕ್ಕಾಗಲೇ ಮಯಕವಾಗುವ ಮಟ್ಟಿಗೆ ಕುಡಿದಿದ್ದ ಮಿತ್ರರಿಗೆ ಯಾರುನ್ನೂ ಕಾಣುವ ಮನಸ್ಸೂ ಇರಲಿಲ್ಲ. "ಯಾರು? ಯಾರಾದರೂ ಹೊಸಬರೇನು?" ಎಂದು ಕೇಳಿದ್ದಕ್ಕೆ ಹುಡುಗ "ಹೌದು ಸರ್, ಈ ಹಿಂದೆ ಇವರು ಇಲ್ಲಿಗೆ ಬಂದಿಲ್ಲ, ವಯಸ್ಸಾದವರು, ಹಿರಿಯರು, ನಾಮ ಹಾಕಿಕೊಂಡಿದ್ದಾರೆ" ಅಂದನಂತೆ.

"ಇಷ್ಟು ಹೊತ್ತಿನಲ್ಲಿ ಯಾರು ಈ ಹಿರಿಯರು. ಹೆಸರು ಕೇಳಿದೆಯಾ? ಯಾರೂಂತ ಕೇಳಿ ಬಾ!" ಅಂತ ನಮ್ಮ ಮಿತ್ರರು ಹೇಳಿದರು. ಹುಡುಗ ಹೊರಕ್ಕೆ ಹೋಗಿ ಮತ್ತೆ ಒಳಬಂದು "ಸರ್, ಇವರು ಈ ವರೆಗೆ ನಮ್ಮ ಕಾರ್ಯಾಲಯಕ್ಕೆ ಬಂದಿರಲಿಲ್ಲ. ಸರ್ ಅವರು ಬೇರೆ ಯಾರೂ ಅಲ್ಲ - ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು... ಅವರೇ ಬಂದಿದ್ದರೆ." ಅಂದನಂತೆ.

ನಮ್ಮ ಮಿತ್ರರಲ್ಲಿ ತಲೆಯಲ್ಲಿ ಏನೆಲ್ಲಾ ನಡೆದುಹೋಗಿರಬಹುದು ಎಂದು ವಿವರಿಸುವುದು ಕಷ್ಟ. ಎಂದೋ ತೀರಿಕೊಂಡ ಹಿರಿಯ ಆತ್ಮ ಹೀಗೆ ತಮ್ಮನ್ನು ಕಾಣಲು ಬರುವುದೆಂದರೆ ಯಾರಿಗಾದರೂ ಭಯವಾದೀತು. ಇಲ್ಲಿ ಹುಡುಗನೇ ಏನಾದರೂ ತಪ್ಪು ಮಾಡಿರಬಹುದು - ಅವನಿಗಾದರೂ ಬದುಕಿರುವವರು ಯಾರು, ತೀರಿಕೊಂಡವರು ಯರು ಎಂದು ತಿಳಿಯಬೇಡವೇ? ಸಾಲದ್ದಕ್ಕೆ ಪುಸ್ತಕದಂಗಡಿಯಲ್ಲಿ ಬೇರೆ ಕೆಲಸ ಮಾಡುತ್ತಿರುವವನು ಎಂದೆಲ್ಲಾ ಅನ್ನಿಸಿದರೂ ಖಚಿತ ಮಾಡಿಕೊಳ್ಳಲು -

"ಏ ಸರಿಯಾಗಿ ನೋಡಿಕೊಂಡು ಬಾ..... ಹೋಗು, ಹೆಸರು ಸರಿಯಾಗಿ ಕೇಳಿಕೊಂಡು ಬಾ" ಎಂದು ಮತ್ತೆ ಅವನನ್ನು ಹೊರಗೆ ಕಳುಹಿದರಂತೆ.

ಆ ಹುಡುಗನು ಪುನಃ ಹೊರಹೋಗಿ ಬಂದವನು "ಅಹುದು ಸರ್.. ಅವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರೇ.. ವಯಸ್ಸಾಗಿದೆ ಸರ್.. ಹಣೆಯ ಮೇಲೆ ಕೆಂಪು ಬಿಳಿ ಮೂರುನಾಮ..." ಎಂದು ವರದಿ ಮಾಡಿದನಂತೆ.

ನನ್ನ ಮಿತ್ರರ ತೆಲೆಯಲ್ಲಿ ಕೂಡಲೇ ಮಲೆನಾಡಿನ ಪಿಶಾಚವೋ, ವೆಂಕಟರಾಯನ ಪಿಶಾಚವೋ ತಾಂಡವವಾಡತೊಡಗಿತ್ತಂತೆ. ಹೀಗೆ ಶುದ್ಧ ತುಂಬು ಜೀವನ ನಡೆಸಿ ಅಸುನೀಗಿದ ಈ ಹಿರಿಯರ ಆತ್ಮ ತನ್ನನ್ನು ಏಕೆ ಕಾಡಬೇಕು? ಹೀಗೆಲ್ಲಾ ಪ್ರಶ್ನೆಗಳು ಉದ್ಭವವಾಗುತ್ತಿದ್ದಂತೆ, ಹುಡುಗ ಕೋಣೆಯಿಂದ ಹೊರಗೆ ಹೋದನಂತೆ. ನಮ್ಮ ಮಿತ್ರರು.. ಈಗಾಗಲೇ ಸುರಾಪಾನ ಮಾಡುತ್ತಿರುವುದನ್ನು ಮಾಸ್ತಿಯವರು ಎಲ್ಲಿ ನೋಡಿಬಿಡುತ್ತಾರೋ ಎಂದು ಕಂಗಾಲಾಗಿ ಬೇಗ ಬೇಗ ಬಾಟಲಿಯನ್ನೂ ಲೋಟವನ್ನೂ ಅಡಗಿಸಿಟ್ಟು ಕೋಣೆಯ ಬಾಗಿಲು ಹಾಕಿ ಹೊರಬಂದರಂತೆ. ಹೊರಬಂದು ನೋಡಿದರೆ ಯಾರೂ ಇಲ್ಲ.

ಹುಡುಗನು "ಇದೀಗ ಕಳುಹಿಸಿಬಿಟ್ಟೆ ಸಾರ್. ನಿಮ್ಮ ಮೂಡು ಸರಿಯಿರಲಿಲ್ಲವಲ್ಲ. ’ನಾಳೆ ನಾಡಿದ್ದರಲ್ಲಿ ಬಂದು ಕಾಣುತ್ತೇನೆ’. ಎಂದು ಹೇಳಿದರು" ಎಂದನಂತೆ.

ಈ ಘಟನೆಯನ್ನು ನಮಗೆಲ್ಲ ವಿವರಿಸಿದ ನಮ್ಮ ಮಿತ್ರರು "ನೋಡಿ ಅಂದಿನಿಂದ ಒಬ್ಬನೇ ಸಂಜೆಯ ವೇಳೆ ಕುಡಿಯುವುದನ್ನು ಬಿಟ್ಟು ಬಿಟ್ಟಿದ್ದೇನೆ. ಅದೇಕೋ ಮಾಸ್ತಿಯವರೆಂದರೆ ಒಂದು ರೀತಿಯ ಅಳುಕು." ಎಂದರು.

ಅಂದು ಸಂಜೆ ನಿಜಕ್ಕೂ ಈ ಘಟನೆ ಹೇಹಾಗಿರಬಹುದು ಎಂದು ವಾಸ್ತವದ ನೆಲೆಯಲ್ಲಿ ವಿವರಿಸಲು ನಾನು ಪ್ರಯತ್ನ ಮಾಡಿದೆ. "ಯಾರಾದರೂ ಹಿರಿಯ ಅಯ್ಯಂಗಾರ್ಯರು ಅಂದು ನಿಮ್ಮನ್ನು ಕಾಣಲು ಬಂದಿದ್ದಿರಬಹುದು" "ಹುಡುಗ ಮಾಸ್ತಿಯವರ ಫೋಟೋ ನೋಡಿದವನು ತಪ್ಪಗಿ ಕಲ್ಪಿಸಿಕೊಂಡಿದ್ದಿರಬಹುದು" ಎಂದೆಲ್ಲಾ ಹೇಳಿದ್ದಕ್ಕೆ ನನ್ನ ಮಿತ್ರರು ಅಲ್ಲವೆಂಬಂತೆ ತಲೆಯಾಡಿಸಿ ಹೀಗೆಂದರು -

"ನೋಡಿ ವಾಸ್ತವದಲ್ಲಿ ಏನಾಯಿತು ಎಂಬುದು ಮುಖ್ಯ ಅಲ್ಲವೇ ಅಲ್ಲ. ಅಂದು ಸಂಜೆ ನಾನು ಒಬ್ಬನೇ ಕುಳಿತು ಕುಡಿಯುತ್ತಿದ್ದೆ. ನಮ್ಮ ಹುಡುಗ ಬೇರೇನೂ ಹೆಸರು ಹೇಳದೇ ಮಾಸ್ತಿಯವರ ಹೆಸರೇ ಹೇಳುವುದಕ್ಕೆ ದೈವ ಪ್ರೇರಣೆಯಾಗಿರಬಹುದು. ಮುಖ್ಯ ಏನೆಂದರೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಹೆಸರಿಗೇ ಅಂಟಿರುವ ಈ ಅಗಾಧ ಶಕ್ತಿ. ಇನ್ಯಾರದೇ ಹೆಸರು ಹೇಳಿದ್ದರೂ ಬಹುಶಃ ನಾನು ಒಬ್ಬನೇ ಕುಡಿಯುವುದನ್ನು ಬಿಡುತ್ತಿರಲಿಲ್ಲ ಅಲ್ಲವೇ? ಇದು ಮುಖ್ಯವಾದ ಸಂಗತಿ."

ಅಹುದೆಂದು ನಾವೆಲ್ಲಾ ಒಪ್ಪಿದೆವು. ದಿಟವಾದ ಮಾತನ್ನು ಯಾರೇ ಹೇಳಿದರೂ ಒಪ್ಪಬೇಕಾದುದ್ದೇ ಅಲ್ಲವೇ?

೧೯೯೨

Tuesday, June 17, 2008

ತಪ್ಪೊಪ್ಪಿಗೆ





ಒಂದು ಮುಂಜಾನೆ

ಚಂದ್ರುವಿಗೆ ಇದ್ದಕ್ಕಿದ್ದ ಹಾಗೆ ಕನಸೊಂದು ಬಿದ್ದ ಹಾಗಾಯಿತು. ಅವನಿಗೆ ತಾನು ಸತ್ಯವಂತನಾಗಬೇಕು ಎಂದು ಇದ್ದಕ್ಕಿದ್ದ ಹಾಗೆ ಅನಿಸತೊಡಗಿತು. ತಾನು ಈ ಮೊದಲು ಮಾಡಿರುವ ಪಾಪಗಳನ್ನೆಲ್ಲಾ ಪಟ್ಟಿ ಮಾಡಿ ಯಾರಿಗಾದರೂ ಒಪ್ಪಿಸಿ ಆತ್ಮಶುದ್ಧಿ ಮಾಡಿಕೊಳ್ಳಬೇಕೆನ್ನಿಸಿತು.

ಚಂದ್ರು ಧಡಕ್ಕನೆ ಎದ್ದು ನಿಂತ. ತಕ್ಷಣ ಕಾರ್ಯೋನ್ಮುಖನಾದ. ತನ್ನ ಕೃತ್ಯಗಳ ಬಗ್ಗೆ ಯೋಚಿಸತೊಡಗಿದ. ತಪ್ಪೊಪ್ಪಿಗೆ ಮಾಡಿಕೊಳ್ಳಬೇಕಾದರೆ ತನ್ನ ತಪ್ಪುಗಳನ್ನೆಲ್ಲಾ ನೆನಪು ಮಾಡಿಕೊಂಡು ಒಂದು ಕಾಗದದಲ್ಲಿ ಬರೆದಿಟ್ಟು ಯಾರ ಮುಂದಾದರೂ ಓದಿಬಿಡಬೇಕು. ಬರೆಯೋಣವೆಂದು ಲೇಖನಿ ಕೈಗೆತ್ತಿಕೊಂಡು ಅದನ್ನೇ ದೀರ್ಘವಾಗಿ ದಿಟ್ಟಿಸಿನೋಡಿ ನಂತರ ಬರೆದ.

ಒಂದು: ಈ ತಪ್ಪೊಪ್ಪಿಗೆ ಬರೆಯುತ್ತಾ ಇರುವ ಪೆನ್ನು ರಾಮೂದು. ನನ್ನ ಹತ್ತಿರ ಇದು ಇಲ್ಲಾ ಅಂತ ಸುಳ್ಳು ಹೇಳಿದ್ದೆ. ಇದನ್ನು ಈ ದಿನವೇ ವಾಪಸ್ಸು ಕೊಟ್ಟು ಪಾಪ ಮುಕ್ತನಾಗಬೇಕು. ಅವನಲ್ಲಿ ನನ್ನ ತಪ್ಪೊಪ್ಪಿಗೆ ಹೇಳಿಕೊಂಡು ಮರಳಿ ಬರಬೇಕು.

ಎರಡು: ವಯ್ಯಾಲಿಕಾವಲ್‌ನಲ್ಲಿ ಇರುವ ರಾಮೂಗೆ ಈ ಪೆನ್ನು ವಾಪಸ್ ಕೊಟ್ಟು ಬರಬೇಕಾದರೆ ಸುಧೀಂದ್ರನ ಸ್ಕೂಟರ್ ತೆಗೆದುಕೊಂಡು ಹೋಗಬೇಕು. ಪೆನ್ನು ವಾಪಸ್ಸು ಕೊಡೋದಕ್ಕೆ ಸ್ಕೂಟರ್ ಕೇಳಿದರೆ ಸುಧಿ ನಗುತ್ತಾನೆ. ಅದಕ್ಕೇ ಅವನಿಗೆ ಸುಳ್ಳು ಹೇಳಬೇಕು. ಸುಳ್ಳು ಹೇಳುವ ಯೋಚನೆ ಮಾಡಿದ್ದೇ ತಪ್ಪು. ಆ ಬಗ್ಗೆ ಒಂದು ತಪ್ಪೊಪ್ಪಿಗೆ. ಹೇಗಿದ್ದರೂ ಸ್ಕೂಟರ್ ಅಂತೂ ತೆಗೆದುಕೊಂಡು ಹೋಗುವುದು ಇದ್ದೇ ಇದೆ. ಆದ್ದರಿಂದ ಸುಳ್ಳು ಹೇಳುವುದು ತಪ್ಪುವುದಿಲ್ಲ. ಅದೊಂದು ತಪ್ಪು.

ಮೂರು: ಸ್ಕೂಟರ್ ತೆಗೆದುಕೊಂಡು ರಾಮೂನ ಮನೆಗೆ ಹೋದರೂ ಪೆನ್ನು ವಾಪಸ್ಸು ಕೊಡುವಾಗ ಅವನ ಹತ್ತಿರ ಯಾಕೆ ತಪ್ಪೊಪ್ಪಿಗೆ ಮಾಡಿಕೊಳ್ಳಬೇಕು? ನನ್ನನ್ನ ನಾನೇ ಸಮರ್ಥಿಸಿಕೊಳ್ಳುತ್ತೇನೆ. ಎಲ್ಲಾ ತಪ್ಪುಗಳನ್ನೂ ಸೇರಿಸಿ ಕಾಂಪ್ರಹೆನ್ಸಿವ್ ಆಗಿ ಒಬ್ಬರ ಹತ್ತಿರ ಹೇಳಿಕೊಂಡರೆ ಸಾಕಲ್ಲವೇ. ಆದರೆ ರಾಮೂನ ಹತ್ತಿರ ತಪ್ಪೊಪ್ಪಿಗೆ ಮಾಡಿಕೊಳ್ಳದಿರುವುದು ಒಂದು ತಪ್ಪು!

ನಾಲಕ್ಕು: ತಪ್ಪೊಪ್ಪಿಗೆಗೆ ವೇಣು ಸರಿಯಾದ ವ್ಯಕ್ತಿ. ಆದರೆ ವಿಚಾರವಾದಿಯಾದ ಅವನ ಹತ್ತಿರ ಕನಸಿನ ವಿಷಯ ಹೇಳಿದರೆ ನಕ್ಕುಬಿಡುತ್ತಾನೆ. ಅವನಿಗೊಂದು ಸುಳ್ಳು ಹೇಳಿಬಿಟ್ಟರಾಯಿತು. ಅದೊಂದೇ ತಪ್ಪೊಪ್ಪಿಗೆ ಬೇರೆಲ್ಲಾದರೂ ಮಾಡಿಕೊಳ್ಳಬೇಕು.

ಐದು: ಪೆನ್ನು ವಾಪಸ್ಸು ಕೊಡಬೇಕಾದ್ದು ಏಕೆ? ಸತ್ಯವಂತನಾಗಬೇಕು ಅಷ್ಟೇ ತಾನೆ? ಅದಕ್ಕೆ ತಪ್ಪೊಪ್ಪಿಗೆ ಮಾಡಿಕೊಳ್ಳಬೇಕು ನಿಜ. ತಪ್ಪುಗಳ ರಿಪೇರಿ ಮಾಡಬೇಕೇ? ಪೆನ್ನನ್ನು ವಾಪಸ್ ಕೊಡದಿದ್ದರೆ ಮೂರು ತಪ್ಪೊಪ್ಪಿಗೆಗಳು ನಿಲ್ಲುತ್ತವೆ. ಆದರೆ ಒಂದು ಒಳ್ಳೆಯ ವಿಚಾರ ಮನಸ್ಸಿಗೆ ಬಂದಾಗ ಅದನ್ನು ತಳ್ಳಿ ಹಾಕುವುದೊಂದು ತಪ್ಪು. ಹೀಗಾಗಿ ಈ ಬಗ್ಗೆ ಒಂದು ತಪ್ಪೊಪ್ಪಿಗೆ ಮಾಡಿಕೊಳ್ಳಬೇಕು.

ಆರು: ಪೆನ್ನಿನಂತಹ ಕ್ಷುಲ್ಲಕ ವಿಚಾರ ಹಿಡಿದು ಮೈನರ್ ತಪ್ಪೊಪ್ಪಿಗೆ ಮಾಡಿಕೊಂಡು ಮೇಜರ್ ತಪ್ಪೊಪ್ಪಿಗೆಗಳ ಬಗೆಗೆ ಮರೆಯುತ್ತಿರುವುದು ತಪ್ಪೇ? ಆ ಬಗ್ಗೆ ಒಂದು ತಪ್ಪೊಪ್ಪಿಗೆ.

ಏಳು: ಮೇಜರ್ ತಪ್ಪೆಂದರೇನು? ವೇಣುವಿನ ಹೆಂಡತಿಯ ಬಗ್ಗೆ ವಿಕೃತವಾಗಿ ಯೋಚಿಸಿದ್ದು ತಪ್ಪೇ. ಮೇಜರ್ ತಪ್ಪೇ? ಆಹಾ.. ಈ ಬಗೆಗೂ ಒಂದು ತಪ್ಪೊಪ್ಪಿಗೆ.

ಎಂಟು: ತಪ್ಪೊಪ್ಪಿಗೆ ನಂಬರ್ ಏಳು ಯಾರಲ್ಲಿ ಮಾಡಿಕೊಳ್ಳಬೇಕು? ವೇಣುವಿನ ಹೆಂಡತಿ ಬಗ್ಗೆ ಆದ್ದರಿಂದ ಅವಳಲ್ಲಿಯೇ ಮಾಡಿಕೊಂಡರೆ ಹೇಗೆ? ಅವಳಿಗೆ ಅದರಿಂದ ವಿಪರೀತ ನೋವು, ಯಾತನೆ, ಮಾನಸಿಕ ಕ್ಷೋಭೆ ಉಂಟಾದರೆ, ಅದಕ್ಕೆ ಕಾರಣೀಭೂತನಾಗಬಹುದಾದ್ದರಿಂದ, ಆ ಬಗ್ಗೆಯೂ ಒಂದು ತಪ್ಪೊಪ್ಪಿಗೆ. ಆದರೆ ಅವಳಿಗೆ ಇದರಿಂದ ನೋವಾಗದೇ ಖುಷಿಯಾದರೆ??!

ಒಂಬತ್ತು: ಎಂಟನೇ ತಪ್ಪೊಪ್ಪಿಗೆ ಮಾಡಿಕೊಂಡಾಗ ವೇಣುವಿನ ಹೆಂಡತಿ ಖುಷಿಗೊಂಡರೆ, ಅವಳು ನನ್ನನ್ನು ಪ್ರೋತ್ಸಾಹಿಸಿದರೆ ವೇಣುವಿಗೆ ಅನ್ಯಾಯ ಮಾಡಿದಂತಾಗುತ್ತದೆಯೇ? ಆ ಬಗ್ಗೆ ಒಂದು ತಪ್ಪೊಪ್ಪಿಗೆ ಬೇಕೇನೋ..

ಹತ್ತು: ವೇಣುವಿಗೂ ಈ ವಿಷಯ ಕೇಳಿ ಬೇಸರವೇನೂ ಆಗಲಿಲ್ಲವೆಂದುಕೊಳ್ಳಿ. ಹಾಗಾದರೆ ಇಂಥಾ ಗೊಡ್ಡು ಭಾವನಾರಹಿತ ವ್ಯಕ್ತಿಯಲ್ಲಿ ತಪ್ಪೊಪ್ಪಿಗೆ ಮಾಡಿಕೊಂಡ ನಾನೆಷ್ಟು ಭಂಡನಿರಬೇಕು. ಇದೇ ಅನ್ಯಾಯವೆನ್ನುವುದಾದರೆ ಈ ಬಗ್ಗೆಯೂ... ತಪ್ಪೊಪ್ಪಿಗೆಯ ಉದ್ದೇಶಕ್ಕೇ ಇದರಿಂದ ಪೆಟ್ಟು ಬೀಳುವುದಾದರೆ ಆ ಬಗ್ಗೆಯೂ ಒಂದು...

ಹನ್ನೊಂದು: ತಪ್ಪೊಪ್ಪಿಗೆಯಿಂದ ಇಷ್ಟೆಲ್ಲಾ ಮಂದಿಗೆ ಮಾನಸಿಕ ಕ್ಷೋಭೆಯಾಗುವುದರಿಂದ, ಈ ತಪ್ಪೊಪ್ಪಿಗೆಯೇ ಒಂದು ತಪ್ಪಾದೀತು. ಈ ಬಗ್ಗೆ ಒಂದು....

ಹನ್ನೆರಡು: ಈ ತಪ್ಪೊಪ್ಪಿಗೆಯ ತಪ್ಪು ಕನಸು ಕಂಡು ತಪ್ಪು ತಪ್ಪಾಗಿ ಯೋಚಿಸಿ ಸುಮ್ಮನಿದ್ದು ಬಿಡುವುದೆಂಬ ತಪ್ಪು ನಿರ್ಧಾರಕ್ಕೆ ಬಂದು ಸುಮ್ಮನೆಯೇ ಇದ್ದು ಬಿಟ್ಟರೆ ಆ ......

ಆ... ಎನ್ನುತ್ತಿದ್ದಂತೆ ಚಂದ್ರುವಿಗೆ ಆಕಳಿಕೆ ಬಂತು. ಮತ್ತೆ ಮಲಗೋಣವೆನ್ನಿಸಿ ಸ್ವರತಿಯಲ್ಲಿ ತೊಡಗಿ ಹಾಗೇ ನಿದ್ದೆ ಮಾಡಿದ.

ಮತ್ತೆ ಎಚ್ಚರವಾದಾಗ ಮುಂಜಾನೆಯ ಕನಸಿನ ಬಗ್ಗೆ ನೆನಪಾಯಿತು. ಪಕ್ಕದಲ್ಲಿದ್ದ ತಪ್ಪೊಪ್ಪಿಗೆಯ ಕಾಗದೆ ಬಿಡಿಸಿ ನೋಡಿದ. ಎಲ್ಲವೂ ಖಾಲಿ! ಅಬ್ಬ! ಸದ್ಯ! ಎಲ್ಲವೂ ಕೆಟ್ಟ ಕನಸಿರಬೇಕು ಎಂದುಕೊಂಡು ಕುರ್ಚಿಗೊರಗಿ ಸೂರಿನತ್ತ ನೋಡಿದ. ರಾಮುವಿನ ಪೆನ್ನು ಡೆಮೊಕಲ್ಸ್ ನ ಕತ್ತಿಯಂತೆ ಸೂರಿನಿಂದ ನೇರವಾಗಿ ಇವನ ತಲೆಯ ಮೇಲೆ ತಲೆ ತಾಕುತ್ತಿರುವಂತೆ ನೇತಾಡುತ್ತಿತ್ತು. ಚಂದ್ರು ಅದನ್ನೆ ತದೇಕಚಿತ್ತ ನೋಡುತ್ತಿದ್ದ. ತೆರೆದ ಅವನ ಕಣ್ಣು ಮುಚ್ಚಲೇ ಇಲ್ಲ. ಒಂದು ಕ್ಷಣ ಮಿಟುಕಿಸಲೂ ಸಾಧ್ಯವಾಗದಷ್ಟು ನಿಶ್ಚಲವಾಗಿ ಸೂರು ದಿಟ್ಟಿಸುತ್ತಾ ಕುಳಿತೇ ಇದ್ದ. ಕೂಡ್ರಿಸಿಟ್ಟ ಶವದಂತೆ!

೧೯೮೮

ಗಾಜುಗಳು



Men seldom make passes
At girls who wear glasses
Dorothy Parker
ಒಂದೂರು.

ಅಲ್ಲಿ ಒಂದು ಕಪ್ಪು ಗಾಜಿನ ಕನ್ನಡಕ, ಒಂದು ಸೋಡಾಬುಡ್ಡಿ ವಾಸವಾಗಿದ್ದುವು. ಒಂದು ದಿನ ಅವೆರಡರಲ್ಲೂ ಯಾರು ಶ್ರೇಷ್ಠ ಎಂಬದರ ಬಗ್ಗೆ ವಾದವಿವಾದ, ಚರ್ಚೆ, ಆರ್ಗ್ಯೂಮೆಂಟುಗಳು ನಡೆದುವು.

ಕಪ್ಪು ಕನ್ನಡಕ ಹೇಳಿತು - ‘ನಾನೇ ಉತ್ತಮ. ನನ್ನನ್ನು ಧರಿಸಿದವರು ಎತ್ತ ನೋಡುತ್ತಿದ್ದಾರೆಂದು ಯಾರಿಗೂ ತಿಳಿಯುವುದಿಲ್ಲ. ನಾನು ಧರಿಸಿದವರ ಅಂದವನ್ನು ಹೆಚ್ಚಿಸುತ್ತೇನೆ.’ ಸೋಡಾಬುಡ್ಡಿ ಬಿಟ್ಟೀತೇ? ‘ನಾನೇ ಉತ್ತಮೋತ್ತಮ. ಏಕೆಂದರೆ ನನ್ನನ್ನು ಧರಿಸಿದವರು ಸಾಮಾನ್ಯವಾಗಿ ಬುದ್ಧಿವಂತರಾಗಿರುತ್ತಾರೆ. ಖ್ಯಾತ ಸಂಶೋಧಕರಾಗಿರುತ್ತಾರೆ. ವಿಜ್ಞಾನಿಗಳಾಗಿರುತ್ತಾರೆ. ನಾನಿಲ್ಲದಿದ್ದರೆ ಅವರು ಬದುಕುವುದು ಅಸಾಧ್ಯ. ನನ್ನನ್ನು ಧರಿಸಿದವರಿಗೆ ದೂರದೃಷ್ಟಿ ಇರುತ್ತದೆ. ಮೇಲಾಗಿ ನನ್ನನ್ನು ಧರಿಸಿದವರೂ ಎತ್ತ ನೋಡುತ್ತಿದ್ದಾರೆ ಎಂಬುದು ತಿಳಿಯುವುದಿಲ್ಲ. ಅಷ್ಟು ದಪ್ಪ ಗಾಜು ನನ್ನದು.’

ಹೀಗೆಯೇ ಬಹಳ ಹೊತ್ತು ಇಬ್ಬರೂ ಜಗಳವಾಡುತ್ತಲೇ ಇದ್ದರು. ಕಡೆಗೆ ಅವರ ಬಗ್ಗೆ ಕಾಲವೇ ತೀರ್ಮಾನಿಸುವುದೆಂದು ಇಬ್ಬರೂ ಸುಮ್ಮನಾದರು.

ಕಡೆಗೊಂದು ದಿನ ಅವರ ಜಗಳ ತೀರ್ಮಾನವಾಗುವ ಸಮಯ ಸಮೀಪವಾಯಿತು. ಠಾಕೋಠೀಕಾಗಿ ಬಟ್ಟೆ ಧರಿಸಿದವನೊಬ್ಬ ಕಪ್ಪು ಕನ್ನಡಕ ತೊಟ್ಟು ನಿಂತಿದ್ದ. ಅವನ ಪಕ್ಕದಲ್ಲೇ ಸೋಡಾಬುಡ್ಡಿ ಧರಿಸಿ ಮತ್ತೊಬ್ಬ ನಿಂತಿದ್ದ. ಅವರೆದುರಿನಲ್ಲಿ ಹುಡುಗಿಯೊಬ್ಬಳು ಮಾಲೆ ಹಿಡಿದು ನಿಂತಿದ್ದಳು. ಸೋಡಾಬುಡ್ಡಿ ಅವಳನ್ನೇ ಆಸೆಯಿಂದ ನೋಡುತ್ತಿದ್ದ. ಅವ ಹಾಗೆ ನೋಡುತ್ತಿದ್ದಂತೆಯೇ ಅವಳು ಮಾಲೆಯನ್ನು ಕಪ್ಪು ಕನ್ನಡಕದವನಿಗೆ ಹಾಕಿದಳು. ಕಪ್ಪು ಕನ್ನಡಕದವ ತನ್ನ ಕತ್ತಲ್ಲಿ ಮಾಲೆ ಬಿದ್ದದ್ದು ನೋಡಿ ತಕ್ಷಣವೇ ಬೇರೆ ಹುಡುಗಿಯೆಡೆಗೆ ದಿಟ್ಟಿಸತೊಡಗಿದ. ಮಾಲೆ ಹಾಕಿದ ಹುಡುಗಿ ಅವ ತನ್ನನ್ನೇ ನೋಡುತ್ತಿದ್ದಾನೆಂದು ಭಾವಿಸಿದಳು.

ಸೋಡಾಬುಡ್ಡಿಗೆ ದುಃಖವಾಯಿತು. ಅದನ್ನು ಧರಿಸಿದ್ದವನಿಗೂ ದುಃಖವಾಯಿತು. ಅವನ ಕಣ್ಣೀರು ಆ ದಪ್ಪ ಗಾಜುಗಳ ನಡುವೆ ಯಾರಿಗೂ ಕಾಣಲಿಲ್ಲ. ಆದರೆ ಸೋಡಾಬುಡ್ಡಿ ಧರಿಸಿದ್ದವನಿಗೆ ತಿಳಿಯದ ಒಂದೇ ವಿಷಯ ನನಗೆ ಗೊತ್ತು.. ಅದು ಕಪ್ಪು ಕನ್ನಡಕದವ ತನ್ನ ಕಂಗಳಿಗೆ ಕಾಂಟಾಕ್ಟ್ ಲೆನ್ಸ್ ಧರಿಸಿದ್ದ ವಿಷಯ!! ಸಂಶೋಧಕ ದೃಷ್ಟಿಯ ಸೋಡಾಬುಡ್ಡಿಗೆ ವಿಜ್ಞಾನ ಇಷ್ಟು ಮುಂದುವರೆದಿದೆ ಎಂದು ಗೊತ್ತೇ ಇರಲಿಲ್ಲ!!!!

ಆಗಸ್ಟ್ ೧೯೮೭




ವರ್ಣಭೇದ



ಒಂದೂರು.
‘ಛೆ ಬೇಡ. ಪ್ರತೀ ಕಥೆಯೂ ಹೀಗೇ ಪ್ರಾರಂಭವಾಗುತ್ತೆ.’
ಸರಿ. ಇನ್ನೊಂದೂರು.
‘ಇನ್ನೊಂದೂರು ಅನ್ನೋದು ಕೂಡ ಒಂದು ಊರೇ ಅಲ್ಲವೇ?’
ಸರಿ, ಸರಿ, ಒಂದು ಪ್ರಪಂಚಾತಲೇ ಇಟ್ಟುಕೊಳ್ಳೋಣ...

ಒಂದು ಪ್ರಪಂಚ.
ಅಲ್ಲೀ ಕಪ್ಪು ಬಿಳುಪು - ಎರಡು ಬಣ್ಣಗಳು ವಾಸವಾಗಿದ್ದುವು.
ಬ್ಲ್ಯಾಕ್ ಇಸ್ ಬ್ಯೂಟಿಫುಲ್ ಎಂಬ ಚೆಂದದ ಮಾತನ್ನು ಆ ಪ್ರಪಂಚದವರು ಹೇಳುತ್ತಿದ್ದರೂ ಎಲ್ಲರೂ ಬಿಳುಪನ್ನೇ ಇಷ್ಟಪಡುತ್ತಿದ್ದರು.

ಕಪ್ಪು ಸಹ ನಮ್ಮ ಸಹೋದರ, ಕಪ್ಪನ್ನೂ ನೀವು ಬಿಳಿಯಂತೆಯೇ ಪ್ರೀತಿಸಿ. ಪಕ್ಕದ ಮನೆಯ ಕಪ್ಪು ವರ್ಣಕ್ಕೂ, ಬಿಳಿಯದಿರುವುದಕ್ಕೆ ಇರುವಂತಹ ಗುಣಗಳೂ, ಅಂಗಾಂಗಗಳೂ ಇವೆ. ಆಫ್ಟರಾಲ್ ಕಲರಿನಲ್ಲೇನಿದೆ? ಹೃದಯ ಮುಖ್ಯ. ಎಂದೆಲ್ಲಾ ಏಸುವಿನೋಪಾದಿಯಲ್ಲಿ ಭಾಷಣಗಳು ಬಿಗಿಯಲ್ಪಟ್ಟುವು. ಕಡೆಗೆ ಕಪ್ಪು ಪ್ರೀತಿಸಲ್ಪಡದಿದ್ದಲ್ಲಿ ಆಟೋಟಗಳಲ್ಲಿ ಮತ್ತು ಸಾಮಾಜಿಕ ಲಾವಾದೇವಿಗಳಲ್ಲಿ ಬಿಳಿಯ ಬಣ್ಣಕ್ಕೆ ಬಹಿಷ್ಕಾರ ಹಾಕುತ್ತೇನೆ ಎಂದು ಕೂಡಾ ಹೆದರಿಸಲಾಯಿತು.

ಏನೇನು ಮಾಡಿದರೂ ಕಪ್ಪಿನ ಸ್ಥಾನ ಕಪ್ಪಿಗೇ, ಬಿಳಿಯ ಸ್ಥಾನ ಬಿಳಿಗೇ. ಇದರ ಅಂತರಾರ್ಥ ಏನೆಂದು ಯಾರಿಗೂ ತಿಳಿಯಲಿಲ್ಲ. ಬಿಳಿ ವರ್ಣಕ್ಕೆ ಇದರ ಬಗ್ಗೆ ಹೊಡೆದಾಡುತ್ತಿರುವ ಜನರನ್ನು ಕಂಡು ಹಾಸ್ಯ. ಅದು ಗಹಗಹಿಸಿ ನಗುತ್ತದೆ. ಅದಕ್ಕೆ ಗೊತ್ತು. ಎಂದೆಂದಿಗೂ ಈ ಪ್ರಪಂಚದಲ್ಲಿ ತನ್ನದೇ ದಬ್ಬಾಳಿಗೆ ನಡೆಯುತ್ತದೆ ಎಂದು. ಯಾರೋ ಬಿಳಿಯನ್ನು ಕೇಳಿದರು: ‘ಇಷ್ಟುದಿನದಿಂದ ಪ್ರಯತ್ನಿಸಿದರೂ ಯಾಕೆ ಕಪ್ಪು ಈವರೆಗೆ ಗೆದ್ದೇ ಇಲ್ಲ?’

ಬಿಳಿ ಮಂದಹಾಸ ಬೀರಿ ಹೇಳಿತು. ‘ನೋಡು ನನ್ನ ಮುಖದ ಮೇಲೆ ಕರಿಯ ಬಣ್ಣ ಮೆತ್ತಿಕೊಂಡರೆ ನಾನು ಕರಿಯನಿಗಿಂತ ಕಪ್ಪಾಗಬಲ್ಲೆ. ಆದರೆ ಎಷ್ಟು ಸುಣ್ಣ ಬಳಿದುಕೊಂಡರೂ ಕಪ್ಪು ಬಿಳಿಯಾಗಲಾರದು. ಹೆಚ್ಚೆಂದರೆ ಬೂದು ಬಣ್ಣವಾಗುತ್ತದೆ. ಬೆಳಕಿನ ರೂಪದಲ್ಲೂ ನನ್ನ ಅಸ್ತಿತ್ವ ಅನಿವಾರ್ಯ. ಕಪ್ಪು ಜೀವನದಲ್ಲಿನ ಕತ್ತಲೆಯನ್ನು ಸಂಕೇತಿಸುತ್ತದೆ.. ಎಬೊವ್ ಆಲ್ ನನಗೆ ಬಹುಸಂಖ್ಯಾತರಾಗಿರುವ ನನ್ನ ಜನಾಂಗದ ಸಪೋರ್ಟ್ ಇದೆ. .. ಏಳು ವರ್ಣಗಳ ಸಪೋರ್ಟ್ ಇದೆ. ಕಪ್ಪು ಎಂದಿಗೂ ಗೆಲ್ಲಲು ಸಾಧ್ಯವೇ ಇಲ್ಲ.’

ಆಗಸ್ಟ್ ೧೯೮೭

ವ್ಯವಸ್ಥೆ


ಒಂದು ಸಾಮಾಜಿಕ ವ್ಯವಸ್ಥೆ ಅಂದಮೇಲೆ ಎರಡು ಅಭಿವಾಜ್ಯ ಅಂಗಗಳು ಇರುತ್ತವೆ. ಒಂದು: ಕಳ್ಳರ ವ್ಯವಸ್ಥೆ. ಮತ್ತೊಂದು - ಪೋಲೀಸರದ್ದು. ಅಂಥದೇ ಒಂದು ವ್ಯವಸ್ಥೆ.

ಒಂದು ರಾತ್ರಿ ಪಾರ್ಥಸಾರಥಿ ಎಂಬವ ತನ್ನ ಸ್ನೇಹಿತನ ಮನೆಯಲ್ಲಿ ಓದಿಕೊಂಡು ಬರುತ್ತೇನೆಂದು ಹೊರಟ. ಕಂಬೈನ್ಡ್ ಸ್ಟಡಿ ಎಂದಮೇಲೆ ಕೇಳಬೇಕೇ? ಎಕನಾಮಿಕ್ಸ್ ಓದುವುದರೊಂದಿಗೆ ಸಿನೇಮಾ ಸಾಹಿತ್ಯಗಳ ಚರ್ಚೆಯೂ ನಡೆಯಿತು. ಎಲ್ಲಾ ಮುಗಿಯುವ ವೇಳೆಗೆ ರಾತ್ರೆ ತಡವಾಗಿತ್ತು.

ಮನೆಗೆ ಹೋಗುವ ದಾರಿಯಲ್ಲಿ ಪರ್ಥನ ಮೇಲೆ ಯಾರೋ ಬಿದ್ದರಂತೆ. ಇದ್ದದ್ದೆಲ್ಲಾ ದೋಚಿದರಂತೆ. ಪಾರ್ಥ ಗಂಡಾದ್ದರಿಂದ ಅವನ ರೇಪ್ ಆಗಲಿಲ್ಲವೆಂಬುದು ಅಂದಿನ ಘಟನೆಯ ಹೈಲೈಟ್. ನಿಮಗೆ ಗೊತ್ತೇ ಇರುತ್ತದೆ, ಏನೆಲ್ಲಾ ಆಗಿರಲಿಕ್ಕೆ ಸಾಧ್ಯ ಅಂತ.

ಮಾರನೆಯದಿನ ಓದಿಗೆಂದು ಪಾರ್ಥನನ್ನು ಅವನ ಸ್ನೇಹಿತ ಕರೆದ. ಸಂಜೆಯ ವೇಳೆಯಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ಪಾರ್ಥನನ್ನು ನೋಡಿ ಸ್ನೇಹಿತನಿಗೆ ಕೋಪ ಉಕ್ಕಿತು. ಬೇಸಿಕಲಿ ಪುಕ್ಕಲು... ಆದ್ದರಿಂದ ನಾಟಕ ಹೂಡುತ್ತಾ ಇದ್ದಾನೆ ಎಂದಕೊಂಡು, ಹೊದಿಕೆ ಎಳೆದು... ‘ಬಾರೋ, ಪರವಾಗಿಲ್ಲ’ ಎಂದ.
‘ನಿಜವಾಗ್ಲೂ ಮೈಹುಷಾರಿಲ್ವೋ..’
‘ಏನೋ.. ಕಳ್ಳರ ಭಯವೇನೋ? ನಾನು ನಿನ್ನನ್ನ ಮನೇಲಿ ಬಿಟ್ಟು ಬರ್ತೇನೆ ಬಾರೋ.’
‘ಉಹುಂ...’
‘ಮತ್ತೆ? ದೆವ್ವದ ಭಯಾನಾ? ಅಥವಾ ನಿನ್ನನ್ನು ಕಳ್ಳಾಂತ ತಿಳ್ಕೊಂಡು ಜನ ತದಕ್ತಾರೆ ಅನ್ನೋ ಭಯಾನಾ?’
‘ಉಹೂಂ...’
‘ಮತ್ತೇ?’
‘ಪೋಲೀಸರ ಭಯ. ಕಳ್ಳರಾದ್ರೆ ದೋಚಿ ಬಿಟ್ಟುಬಿಡುತ್ತಾರೆ. ರಾತ್ರಿ ಮನೆಗೆ ಹೋಗಿ ಬೆಚ್ಚಗೆ ಮಲಗಬಹುದು. ಪೋಲೀಸರಾದ್ರೆ ದೋಚೋದಲ್ದೇ, ಠಾಣೇಲೂ ಕೂಡಿಹಾಕ್ತಾರೆ. ಅಲ್ಲಿ ಒಂದೇ ಸೊಳ್ಳೇ ಕಾಟಾ ಕಣೋ. ಕಾಯ್ಲ್ ಬೇರೇ ಇರೊಲ್ಲ.. ಆಮೇಲೆ ಬಂದಿರೋ ಮಲೇರಿಯಾ ಜಾಸ್ತಿ ಆದ್ರೆ?!!!!’

ಆಗಸ್ಟ್ ೧೯೮೭

ಬಸವನ ಹುಳು



ಒಂದೂರು. ಅಲ್ಲೊಂದು ಬಸವನ ಹುಳು ಇತ್ತು. ಅದನ್ನು ‘ಪ್ರಗತಿ’ ಎಂದು ಕರೆಯೋಣ.

ಪ್ರಗತಿ ಮುಂದೆ ಸಾಗುತ್ತಿತ್ತು. ಎಲ್ಲವೂ ಚೆನ್ನಾಗಿಯೇ ಇತ್ತು. ನಿಧಾನವಾಗಿಯಾದರೂ ಪ್ರಗತಿ ಮುಂದೆ ಹೋಗುತ್ತಿದೆಯಲ್ಲಾ ಎಂದು ಅದನ್ನು ನೋಡಿದವರು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರು.

ಒಂದು ದಿನ ಒಂದು ಗೋಸುಂಬೆ ಪ್ರಗತಿಯನ್ನು ನೋಡಿತು. ಅದಕ್ಕೇಕೋ ಪ್ರಗತಿಯನ್ನು ಕಂಡರೆ ವಿಸ್ಮಯವಾಗುತ್ತಿತ್ತು. ಅದರೊಂದಿಗೆ ಆಟವಾಡೋಣವೆನ್ನಿಸಿತು. ಜೊತೆಗೆ ಗೋಸುಂಬೆಗೆ ಸಂಶೋಧನಾದೃಷ್ಟಿ ಬೇರೆ!

ಗೋಸುಂಬೆ ಸುಮ್ಮನಿರಲಾರದೇ ಪಕ್ಕದೂರಿನ ಸಂತೆಗೆ ಹೋಯಿತು. ಅಲ್ಲಿದ್ದ ಶ್ರೀಸಾಮಾನ್ಯನೊಬ್ಬನ ಬಳಿ ‘ಅಧಿಕಾರ’ ಎಂದು ಮೇಲೆ ಬರೆದಿದ್ದ ತಗಡಿನ ಪೆಟ್ಟಿಗೆಯಿತ್ತು. ಗೋಸುಂಬೆ ಅವನ ಬಳಿ ವ್ಯಾಪಾರಕ್ಕಿಳಿಯಿತು. ಅವನಿಗೊಂದು ಪಂಚೆ, ಅವನ ಹೆಂಡತಿಗೊಂದು ನೂಲಿನ ಸೀರೆ ಮತ್ತು ಕುಡಿಯಲೊಂದಿಷ್ಟು ಸಾರಾಯಿ ಕೊಟ್ಟು ‘ಬಾರ್ಟರ್’ ವಿಧಾನದಲ್ಲಿ ಗೋಸುಂಬೆ ಆ ಪೆಟ್ಟಿಗೆಯನ್ನು ತೆಗೆದುಕೊಂಡಿತು.

ಊರಿಗೆ ಬಂದ ನಂತರ ಗೋಸುಂಬೆ ಆಸಕ್ತಿಯಿಂದ ಆ ಪೆಟ್ಟಿಗೆಯನ್ನು ತೆರೆದು ನೋಡಿತು. ಅದರಲ್ಲಿ ಒಂದು ಎಲಾಸ್ಟಿಕ್ ತುಂಡಿತ್ತು. ಗೋಸುಂಬೆ ಎಲಾಸ್ಟಿಕ್ ತುಂಡಿನ ಒಂದು ತುದಿಯನ್ನ ಪ್ರಗತಿಯ ಬಾಲಕ್ಕೆ ಕಟ್ಟಿತು. ಮತ್ತೊಂದು ತುದಿಯನ್ನು ಪಕ್ಕದಲ್ಲಿದ್ದ ಒಣಗಿ ತುಕ್ಕುಹಿಡಿದ ನೀರು ಸರಬರಾಜು ಪೈಪಿಗೆ ಕಟ್ಟಿಬಿಟ್ಟಿತು.

ಅಂದಿನಿಂದ ಪ್ರಗತಿ ಎಲಾಸ್ಟಿಕ್ ಎಳೆಯುತ್ತಾ ಮುಂದೆ ಸಾಗುವುದು, ಸ್ವಲ್ಪ ಹೊತ್ತಾದ ಮೇಲೆ ತಿರುಗಿ ಮೊದಲ ಸ್ಥಾನಕ್ಕೇ ಠಪ್ ಎಂದು ಹಿಂದಿರುಗುವುದೂ ಮಾಡುತ್ತಿದೆ. ಪಕ್ಕದೂರಿನ ಶ್ರೀಸಾಮಾನ್ಯನ ಬಳಿ ಮತ್ತೊಂದು ವಸ್ತು ಇದೆ. ಅದು ಕತ್ತರಿ. ಅವನಿಗೆ ಈ ಅವಸ್ಥೆ ನೋಡಲಾಗುತ್ತಿಲ್ಲ. ಆ ಎಲಾಸ್ಟಿಕ್ ತುಂಡನ್ನು ಕತ್ತರಿಸಬೇಕೆಂದು ಅಂದಿನಿಂದ ಕಾಯುತ್ತಿದ್ದಾನೆ. ಗೋಸುಂಬೆ ಅಲ್ಲೇ ಒಂದು ಕುರ್ಚಿಯಲ್ಲೀ ಪಟ್ಟಾಗಿ ಕೂತು ಪ್ರಗತಿಗಾಗುತ್ತಿರುವ ಗತಿ ಕಂಡು ವಿಕೃತಾನಂದ ಪಡೆಯುತ್ತಿದ್ದಾನೆ. ಹಾಗೇ ಅವನು ಕುರ್ಚಿಯ ಕಾವಲು ಕಾಯುತ್ತಿದ್ದಾನೆ.

ಗೋಸುಂಬೆ ಅಲ್ಲಿಂದ ಎದ್ದರೆ ಎಲಾಸ್ಟಿಕ್ ಕತ್ತರಿಸಬಹುದು. ಎಲಾಸ್ಟಿಕ್ ತುಂಡಾದರೆ ಗೋಸುಂಬೆ ಏಳುತ್ತಾನೆ. ಹೀಗೆ ಇದೊಂದು ವಿಷ ವೃತ್ತವಾಗಿದೆ.

ಆಗಸ್ಟ್ ೧೯೮೭